ಬೆಂಗಳೂರು: ರೂಮ್ ಕೊಡಿಸುವುದಾಗಿ ನಂಬಿಸಿದ ಅಪರಿಚಿತನೋರ್ವ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕಾಡುಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಸಂತ್ರಸ್ತೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾಡುಗುಡಿ ಠಾಣೆಯ ಪೊಲೀಸರು ತಮಿಳುನಾಡು ಮೂಲದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗೋವರ್ಧನ್ ಶಿವರೆಡ್ಡಿ ಬಂಧಿತ ಆರೋಪಿ. ಈತ ಡಿಸೆಂಬರ್ 16ರಂದು ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಕೇರಳ ಮೂಲದ ಯುವತಿಯ ಪರಿಚಯ ಮಾಡಿಕೊಂಡಿದ್ದ. ಅಕ್ಷರಸ್ಥೆಯಾಗಿದ್ದ ಯುವತಿ ಕೆಲಸ ಸಲುವಾಗಿ ಬೆಂಗಳೂರಿಗೆ ಬಂದಿದ್ದಳು. ಉಳಿದುಕೊಳ್ಳಲು ರೂಮ್ ಬೇಕೆಂದು ಆರೋಪಿ ಬಳಿ ಹೇಳಿಕೊಂಡಿದ್ದಾಳೆ.
ತನಗೆ ಗೊತ್ತಿರುವ ಲಾಡ್ಜ್ ಇದೆ ಎಂದು ಹೇಳಿ ಕಾಡುಗೋಡಿ ಬಳಿ ಇರುವ ಬಾಲಾಜಿ ಲಾಡ್ಜ್ ಕರೆದೊಯ್ದಿದ್ದಾನೆ. ಮೂರು ನಾಲ್ಕು ದಿನಗಳ ಕಾಲ ರೂಮ್ನಲ್ಲಿ ಆಕೆ ಉಳಿದುಕೊಂಡಿದ್ದಳು. ಈ ಮಧ್ಯೆ ನನ್ನ ಮೇಲೆ ಆತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಆರೋಪಿ ಗಾರೆ ಕೆಲಸ ಮಾಡಿಕೊಂಡಿದ್ದು, ಈತನ ಸಂಬಂಧಿಕರು ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ವರ್ಷಗಳ ಹಿಂದೆ ಕಾಡುಗೋಡಿ ಸಮೀಪದ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಈತ, ಬಾಲಾಜಿ ಲಾಡ್ಜ್ನಲ್ಲಿ ವಾಸ್ತವ್ಯ ಹೂಡಿದ್ದನು. ಈ ಪರಿಚಯ ಇದ್ದಿದ್ದರಿಂದ ಮೆಜೆಸ್ಟಿಕ್ನಿಂದ ಕಾಡುಗೋಡಿವರೆಗೂ ಯುವತಿಯನ್ನು ಕರೆತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.