ಠೇವಣಿದಾರರ ಹಣವನ್ನ ದುರ್ಬಳಕೆ ಮಾಡಿಕೊಂಡು ಕುರುಹಿನ ಶೆಟ್ಟಿ ಸೌಹಾರ್ದ ಸಹಕಾರ ಬ್ಯಾಂಕ್ ನಲ್ಲಿದ್ದ ಕೋಟ್ಯಂತರ ರೂಪಾಯಿ ಸಾಲ ನೀಡಿ ಆರ್ಥಿಕ ದಿವಾಳಿಗೆ ನೂಕಿ ಅಕ್ರಮವೆಸಗಿದ್ದ ಆರೋಪದಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಐವರನ್ನು ಕೆಂಪೇಗೌಡನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಸೌಹಾರ್ದ ಬ್ಯಾಂಕ್ ನ ಕರ್ಮಕಾಂಡ ಬಯಲಾಗಿದೆ. ಠೇವಣಿದಾರರ ಹಣವನ್ನ ದುರ್ಬಳಕೆ ಮಾಡಿಕೊಂಡು ಕುರುಹಿನ ಶೆಟ್ಟಿ ಸೌಹಾರ್ದ ಸಹಕಾರ ಬ್ಯಾಂಕ್ ನಲ್ಲಿದ್ದ ಕೋಟ್ಯಂತರ ರೂಪಾಯಿ ಸಾಲ ನೀಡಿ ಆರ್ಥಿಕ ದಿವಾಳಿಗೆ ನೂಕಿ ಅಕ್ರಮವೆಸಗಿದ್ದ ಆರೋಪದಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಐವರನ್ನು ಕೆಂಪೇಗೌಡನಗರ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಈಶ್ವರಪ್ಪ, ಸಾಲಗಾರರಾದ ದಯಾನಂದ್, ಚಂದ್ರಶೇಖರ್ ಹಾಗೂ ಸುರಬಿ ಚಿಟ್ಸ್ ಮಾಲೀಕ ಬಿ.ಟಿ.ಮೋಹನ್ ಎಂಬುವರನ್ನು ಬಂಧಿಸಲಾಗಿದೆ.
ಕೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕುರುಹಿನ ಶೆಟ್ಟಿ ಬ್ಯಾಂಕ್ ನಲ್ಲಿ 2011 ರಿಂದ 22ರವರೆಗೆ ಶ್ರೀನಿವಾಸ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದರು. ನೂರಾರು ಗ್ರಾಹಕರು ಠೇವಣಿ ರೂಪದಲ್ಲಿ ಬಂದಿದ್ದ ಕೋಟ್ಯಾಂತರ ರೂಪಾಯಿ ಹಣವನ್ನ ಸಾಲ ಮಂಜೂರಾತಿ ಸಮಿತಿ ಅಧಿಕಾರಿಗಳ ಮುಖಾಂತರ ದಾಖಲಾತಿ ಪರಿಶೀಲಿಸದೆ ಸಾಲ ಮಂಜೂರು ಮಾಡಿಸಿದ್ದರು. ನೋಟು ಅಮಾನ್ಯನೀಕರಣ ಹಾಗೂ ಕೊರೊನಾ ನೆಪ ಹೇಳಿ ಹಲವು ವರ್ಷಗಳಿಂದ ಸಾಲಗಾರರು ಸಹ ಲೋನ್ ಕಟ್ಟಿರಲಿಲ್ಲ.
ಸ್ವತ್ತುಗಳ ಮೇಲೆ ನಿಗದಿಗಿಂತ ಹೆಚ್ಚ ಸಾಲ ನೀಡುವುದರ ಜೊತೆಗೆ ಬೆಂಗಳೂರಿನಲ್ಲಿ 10 ಶಾಖಾ ಕಚೇರಿ ಹೊಂದಿರುವ ಸುರಭಿ ಚಿಟ್ಸ್ ಲಿಮಿಟೆಡ್ ಮಾಲೀಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅನರ್ಹರಿಗೆ ಕೋಟಿಗಟ್ಟಲೇ ಸಾಲ ನೀಡಿದ್ದರು. ಕಾಲಕ್ರಮೇಣ ಠೇವಣಿಯಲ್ಲಿ ರೂಪದಲ್ಲಿ ಸುಮಾರು 90 ಕೋಟಿ ಪೈಕಿ 78 ಕೋಟಿ ಹಣ ದುಬರ್ಳಕೆ ಮಾಡಿಕೊಂಡಿದ್ದರು. ಗ್ರಾಹಕರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಐವರು ವಂಚಕರನ್ನು ಸೆರೆಹಿಡಿದ್ದಾರೆ. ವಂಚಕ ಶ್ರೀನಿವಾಸ್ ಅಧ್ಯಕ್ಷ ಅವಧಿಯಲ್ಲಿ ಸಿಇಓ, ಸಾಲ ಮಂಜೂರಾತಿ ಸಮಿತಿಯಲ್ಲಿ ಅಧಿಕಾರಿಗಳು ಅಕ್ರಮ ಕೂಟದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಸದ್ಯ ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.